ಶ್ರೀಮಂಗಲ, ಅ. 15: ಜಿಲ್ಲೆಯ ಮೂಲನಿವಾಸಿಗಳ ನಡುವೆ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಬೆಕ್ಕೆಸೊಡ್ಲೂರು ಗ್ರಾಮದ ಶ್ರೀರಾಮ ಯುವಕ ಸಂಘದ ವತಿಯಿಂದ ವಾಲಿಬಾಲ್ ಪಂದ್ಯಾಟ ವನ್ನು ಬೆಕ್ಕೆಸೊಡ್ಲೂರು ಶಾರದಾ ಪ್ರೌಢಶಾಲಾ ಮೈದಾನದಲ್ಲಿ ತಾ. 30 ಹಾಗೂ 31ರಂದು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪೋರಂಗಡ ಸೂರಜ್ ಉತ್ತಪ್ಪ ತಿಳಿಸಿದ್ದಾರೆ.
ಬೆಕ್ಕೆಸೊಡ್ಲೂರು ಶ್ರೀರಾಮ ಯುವಕ ಸಂಘದ ಸಭಾಂಗಣದಲ್ಲಿ ಈ ಬಗ್ಗೆ ಸಂಘದ ಅಧ್ಯಕ್ಷರಾದ ಪೋರಂಗಡ ಸೂರಜ್ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಘದಿಂದ ಈ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲೆಯ ಮೂಲನಿವಾಸಿಗಳು ಒಂದೆಡೆ ಸೇರಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಕ್ರೀಡೆಯಿಂದ ಪರಸ್ಪರರಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಈ ಪಂದ್ಯಾಟವನ್ನು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಪ್ರಮುಖರು ತಿಳಿಸಿದರು.
ಒಂದು ತಂಡದಲ್ಲಿ ಜಿಲ್ಲೆಯ ಯಾವದೇ ಮೂಲನಿವಾಸಿ ಸಮುದಾಯದ ಆಟಗಾರ ಆಡಬಹುದು. ಒಂದು ತಂಡ ಒಂದು ಸಮುದಾಯಕ್ಕೆ ಸೀಮಿತವಾಗಿಯೂ ಅಥವಾ ಮೂಲನಿವಾಸಿ ಸಮುದಾಯದ ಯಾವದಾದರೂ ಆಟಗಾರರನ್ನು ತಂಡದಲ್ಲಿ ಪಾಲ್ಗೊಳ್ಳಬಹುದು. ಆದರೆ ಅತಿಥಿ ಆಟಗಾರ ಜಿಲ್ಲೆಯ ಮೂಲ ನಿವಾಸಿಯಾಗಿರಬೇಕು. ಅವರು ಜಿಲ್ಲೆಯ ಹೊರಗೆ ನೆಲೆಸಿದವರಿಗೂ ಅವಕಾಶವಿದೆ. ಆದರೆ ಮೂಲ ನಿವಾಸಿಯಲ್ಲದ ಸಮುದಾಯದ ಅತಿಥಿ ಆಟಗಾರರಿಗೆ ಅವಕಾಶವಿಲ್ಲ ಎಂದು ನಿರ್ಧರಿಸಲಾಯಿತು.
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ರೂ.15 ಸಾವಿರ, ದ್ವಿತೀಯ ಬಹುಮಾನ ರೂ. 10 ಸಾವಿರ, ತೃತೀಯ ಬಹುಮಾನ ರೂ. 5 ಸಾವಿರ ಹಾಗೂ ಟ್ರೋಫಿ ನೀಡಲಾಗುವದು. ಪ್ರವೇಶಾತಿ ತಾ.27ರ ಒಳಗೆ ನೊಂದಾಯಿಸಿಕೊಳ್ಳಬೇಕು. ಪ್ರವೇಶಾತಿ ಶುಲ್ಕ ರೂ. 500 ನಿಗದಿಪಡಿಸಲಾಗಿದೆ. ತಾ.31ರಂದು ಅಪರಾಹ್ನ 2 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ಸಂದರ್ಭ ಬೆಕ್ಕೆಸೊಡ್ಲೂರು ಗ್ರಾಮಕ್ಕೆ ಸೇರಿದ ಭಾರತ ಅಂತರ್ರಾಷ್ಟ್ರೀಯ ಮಹಿಳಾ ಹಾಕಿ ತಂಡವನ್ನು ಪ್ರತಿನಿಧಿಸುತ್ತಿರುವ ಮಲ್ಲಮಾಡ ಪೊನ್ನಮ್ಮ ಹಾಗೂ ಭಾರತ ಮಹಿಳಾ ಜೂನಿಯರ್ ಹಾಕಿ ತಂಡವನ್ನು ಪ್ರತಿನಿಧಿಸುತ್ತಿರುವ ಮಲ್ಲಮಾಡ ಲೀಲಾವತಿ ಅವರನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ತಂಡಗಳನ್ನು ಮಡಿಕೇರಿಯಲ್ಲಿ ಬ್ರಹ್ಮಗಿರಿ ವಾರಪತ್ರಿಕೆ ಕಚೇರಿ, ವೀರಾಜಪೇಟೆಯಲ್ಲಿ ಪೂಮಾಲೆ ವಾರಪತ್ರಿಕೆ ಕಚೇರಿ, ಗೋಣಿಕೊಪ್ಪದಲ್ಲಿ ಶುಭಂ ಎಲೆಕ್ಟ್ರಾನಿಕ್ಸ್, ಪೊನ್ನಂಪೇಟೆ ಯಲ್ಲಿ ಕಾವೇರಿ ಏಜೆನ್ಸಿ ಅವರಲ್ಲಿ ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಭೆಯಲ್ಲಿ ಪದಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಮಾಚಿಮಾಡ ಸಂಪತ್ ಸೋಮಣ್ಣ, ಸದಸ್ಯರುಗಳಾದ ಮಾಚಂಗಡ ರೋಶಿತ್, ಸುಳ್ಳಿಮಾಡ ಹರೀಶ್, ಮಾಚಂಗಡ ಸಂಪತ್, ಮಲ್ಲಮಾಡ ಪೃಥ್ವಿ ತಿಮ್ಮಯ್ಯ, ಮಲ್ಲಮಾಡ ಮುತ್ತಪ್ಪ, ಮಚ್ಚಮಾಡ ವಿನೋದ್, ಮಲ್ಲಮಾಡ ಗಣಪತಿ ಹಾಜರಿದ್ದರು.