ಶ್ರೀಮಂಗಲ, ಅ. 27: ಕೊಡಗು ಜಿಲ್ಲೆಯ ಮಟ್ಟಿಗೆ ಟಿಪ್ಪು ಜಯಂತಿ ಆಚರಿಸದಂತೆ ಕುಟ್ಟ ಕೊಡವ ಸಮಾಜದ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
ಕುಟ್ಟ ಕೊಡವ ಸಮಾಜದ ಕಚೇರಿಯಲ್ಲಿ ಸಮಾಜ ಹಾಗೂ ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷರೂ ಆಗಿರುವ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕೊಡಗಿನಲ್ಲಿ ಇದುವರೆಗೂ ಇಲ್ಲಿನ ಎಲ್ಲಾ ಜನರು ಅನ್ಯೋನ್ಯವಾಗಿ ಜೀವಿಸುತ್ತಿದ್ದು, ಕೋಮು ಪ್ರಚೋದನೆಗೆ ಎಡೆಮಾಡುವಂತಹ ಟಿಪ್ಪು ಜಯಂತಿಯನ್ನು ಸರಕಾರ ಮಾಡಬಾರದು ಎಂದು ಸರಕಾರವನ್ನು ಆಗ್ರಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕುಟ್ಟ ಕರ್ನಾಟಕ ಹಾಗೂ ಕೇರಳ ರಾಜ್ಯದ ಗಡಿ ಪ್ರದೇಶವಾಗಿದ್ದು, ಇದುವರೆಗೂ ಇಲ್ಲಿ ಯಾವದೇ ಕೋಮು ದ್ವೇಷದ ಪ್ರಕರಣಗಳು ನಡೆದಿಲ್ಲ. ಕುಟ್ಟ ಕೊಡವ ಸಮಾಜವು ವಿರೋಧಿಸುತ್ತಿಲ್ಲ. ಟಿಪ್ಪು ದೇವಟ್ಪರಂಬುವಿನಲ್ಲಿ ಸಹಸ್ರಾರು ಕೊಡವರನ್ನು ಮೋಸದಿಂದ ಹತ್ಯೆ ಮಾಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಕೊಡವರನ್ನು ಇಸ್ಲಾಂಗೆ ಮತಾಂತರ ಮಾಡಿದ್ದನು. ಮತಾಂತರಕ್ಕೆ ಒಪ್ಪದ ಸಾವಿರಾರು ಕೊಡವರನ್ನು ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಕಗ್ಗೊಲೆ ನಡೆಸಿದ್ದಾನೆ. ಇಂತಹ ದೌರ್ಜನ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಟಿಪ್ಪು 1750ರಲ್ಲಿ ಜನಿಸಿದ್ದು, 1799ರಲ್ಲಿ ಮೃತಪಟ್ಟ, 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು, ಟಿಪ್ಪು ಹೇಗೆ ಸ್ವತಂತ್ರ್ಯ ಹೋರಾಟಗಾರ ಅಥವಾ ದೇಶಪ್ರೇಮಿಯಾಗುತ್ತಾನೆ ಎಂದು ಅವರು ಪ್ರಶ್ನಿಸಿದರು. ಟಿಪ್ಪು ಇತಿಹಾಸದಲ್ಲಿ ನಡೆಸಿದ ಮತಾಂತರಕ್ಕೆ ಇಂದು ಜಿಲ್ಲೆಯಲ್ಲಿ ಕೊಡವ ಮುಸ್ಲಿಮರೇ ಜೀವಂತ ಸಾಕ್ಷಿಯಾಗಿದ್ದಾರೆ.
ಸರಕಾರವಾಗಲಿ ಮುಸ್ಲಿಂ ಜನಾಂಗವಾಗಲಿ ಟಿಪ್ಪು ಜಯಂತಿ ಆಚರಣೆಯನ್ನು ಪ್ರತಿಷ್ಠೆಯ ವಿಚಾರವಾಗಿ ಮಾಡಿಕೊಳ್ಳದೆ ಇತಿಹಾಸದ ಅಧ್ಯಾಯವನ್ನು ಪರಾಮರ್ಶಿಸಿ ವಾಸ್ತವಾಂಶವನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಯ ಮಟ್ಟಿಗೆ ಟಿಪ್ಪು ಜಯಂತಿ ಆಚರಣೆ ಯನ್ನು ಕೈಬಿಡುವಂತೆ ಆಗ್ರಹಿಸಿದರು.
ಸಭೆಯಲ್ಲಿ ಕೊಡವ ಸಮಾಜದ ಕಾರ್ಯದರ್ಶಿ ಕೊಂಗಾಂಡ ಸುರೇಶ್, ಜಂಟಿ ಕಾರ್ಯದರ್ಶಿ ತೀತಿರ ಸಿ. ಮಂದಣ್ಣ, ನಿರ್ದೆಶಕರುಗಳಾದ ಕೇಚಮಾಡ ವಾಸು ಉತ್ತಪ್ಪ, ಚೆಪ್ಪುಡಿರ ಪಾರ್ಥ ಮತ್ತಿತರರು ಹಾಜರಿದ್ದರು.