ಮಡಿಕೇರಿ, ಜೂ. 26: ರಾಜ್ಯ ಬಿಜೆಪಿ ಯುವ ಮೋರ್ಚಾದ ಖಜಾಂಚಿಯಾಗಿ ಕೊಡಗು ಜಿಲ್ಲೆಯ ಶಶಾಂಕ್ ಭೀಮಯ್ಯ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ ಅವರ ಪುತ್ರರಾದ ಶಶಾಂಕ್ ಭೀಮಯ್ಯ ಈ ಹಿಂದೆ ರಾಜ್ಯ ಯುವ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಕಿರಿಯ ವಯಸ್ಸಿನಲ್ಲಿ ಮಹತ್ವದ ಜವಾಬ್ದಾರಿ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಜಿ.ಪಂ. ಚುನಾವಣೆಯಲ್ಲಿ ಕದನೂರು ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಶಶಾಂಕ್‍ಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು. ಯುವಕರ ಸಂಘಟನೆಯೊಂದಿಗೆ ಪಕ್ಷವನ್ನು ಸದೃಢಗೊಳಿಸಲು ಪ್ರಯತ್ನಿಸುವದಾಗಿ ಅವರು ಹೇಳಿದ್ದಾರೆ. ಕೊಡಗು- ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಯುವ ಬಿಜೆಪಿ ಅಧ್ಯಕ್ಷರಾಗಿದ್ದು, ಇದೀಗ ಶಶಾಂಕ್‍ಗೆ ಖಜಾಂಚಿ ಸ್ಥಾನದ ಜವಾಬ್ದಾರಿ ನೀಡಲಾಗಿದೆ.