ಕುಶಾಲನಗರ, ಅ. 2: ಗುಡ್ಡೆಹೊಸೂರು ಐಶ್ವರ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಸಾಧನೆಗೈದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೊಡ್ಲಿಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಾಲೇಜಿನ ವಾಲಿಬಾಲ್ ತಂಡ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಡಿಸ್ಕಸ್ ಥ್ರೋ ಹಾಗೂ ಟ್ರಿಪಲ್ ಜಂಪ್‍ನಲ್ಲಿ ಮಿಥುನ್ ಮತ್ತು 100 ಮೀ. ಓಟದಲ್ಲಿ ವಿದ್ಯಾರ್ಥಿ ಲಿಖಿತ್ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 5 ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಅಕ್ಷಯ್ ತೃತೀಯ ಸ್ಥಾನ, ಕಬ್ಬಡಿ ಬಾಲಕರ ವಿಭಾಗ ದ್ವಿತೀಯ, ಟೇಬಲ್ ಟೆನ್ನಿಸ್ ಬಾಲಕರ ವಿಭಾಗ ದ್ವಿತೀಯ, ವಾಲಿಬಾಲ್ ಮತ್ತು ಟೇಬಲ್ ಟೆನ್ನಿಸ್‍ನಲ್ಲಿ ಬಾಲಕಿಯರ ವಿಭಾಗ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ಕಾಲೇಜಿನ ಕೆ.ಎಲ್. ಗಣೇಶ್ ಕಾಲೇಜನ್ನು ಪ್ರತಿನಿಧಿಸಿದ್ದರು.