ಮಡಿಕೇರಿ, ಜ. 29: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ಶುಕ್ರವಾರ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಅವರು ಅಧಿಕಾರಿಗಳು ಸಭೆ ನಡೆದ ನಂತರ ಅವುಗಳನ್ನು ಅನುಸರಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿಯ ಸದಸ್ಯ ಮುತ್ತಪ್ಪ ಅವರು ಜಿಲ್ಲಾ ಮಟ್ಟದಲ್ಲಿ ಸಭೆಯಾದ ನಂತರ ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕು. ಆದರೆ ಅಧಿಕಾರಿಗಳು ಸಭೆ ನಡೆಸದೇ ಇದ್ದರೇ ಸರಕಾರದ ಕಾರ್ಯಕ್ರಮಗಳು ಜನರಿಗೆ ಹೇಗೆ ತಲಪುತ್ತವೆ ಎಂದು ಪ್ರಶ್ನಿಸಿದರು.
94 ಸಿ ರಡಿ ಅರ್ಜಿ ಹಾಕಲು ಅವಕಾಶ ನೀಡಿ ಫೆಬ್ರವರಿ 20 ರವರೆಗೆ ಅವಧಿ ವಿಸ್ತರಿಸಲಾಗಿದೆ. ಅನುಸೂಚಿತ ಜಾತಿ, ಅನುಸೂಚಿತ ಪಂಗಡದವರು ಇದರ ಸದುಪಯೋಗ ಪಡೆಯಬೇಕು, ನಿವೇಶನ ಇಲ್ಲದವರಿದ್ದರೆ ಅವರಿಗೆ ಅರ್ಜಿ ಹಾಕಲು ಹೇಳಿ ಎಂದು ಸಮಿತಿ ಸದಸ್ಯರಿಗೆ ಸಲಹೆ ಮಾಡಿದರು.
ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆಧಾರ ಕಾರ್ಡ್ ಹಾಗೂ ಪಡಿತರ ಚೀಟಿ ಹೊಂದಿರದಿದ್ದರೆ ಅಂತಹವರಿಗೆ ಪತ್ರ ಹಾಗೂ ಸೌಲಭ್ಯಗಳನ್ನು ಪಡೆಯಲು ಸಹಕರಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಮಾತನಾಡಿ, ಕಳೆದ 6-7 ತಿಂಗಳಿಂದ ಜಿಲ್ಲೆಯಲ್ಲಿ 207 ಕಡೆ ಸ್ಮಶಾನಕ್ಕೆ ಜಾಗ ಪರಿಶೀಲಿಸಲಾಗಿದೆ. ಇದಕ್ಕೆ ತಹಶೀಲ್ದಾರರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ. ಸಿಇಓ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇ ಗೌಡ ಹಲವು ಮಾಹಿತಿ ನೀಡಿದರು.