ನಾಪೆÇೀಕ್ಲು, ಜು. 22: ಕೊಡಗು ಜಿಲ್ಲೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಪ್ರವಾಸಿ ತಾಣವಾಗಿ ಪರಿಗಣಿಸಲ್ಪಡುತ್ತಿದೆ. ಜಿಲ್ಲೆಯ ಸುಂದರ ಪರಿಸರ, ವಾತಾವರಣ, ಜಲಪಾತಗಳು, ಆಹಾರ ವೈವಿಧ್ಯ ಎಲ್ಲವೂ ಪ್ರವಾಸಿಗರಿಗೆ ಅತ್ಯಂತ ಪ್ರಿಯ. ಆದರೆ ಇದೆಲ್ಲದರ ನಿರೀಕ್ಷೆಯಿಂದ ಬರುತ್ತಿರುವ ಪ್ರವಾಸಿಗರ ಜೀವಕ್ಕೆ ಇಲ್ಲಿ ರಕ್ಷಣೆಯಿಲ್ಲ ದಂತಾದರೆ, ಜಿಲ್ಲೆಗೆ ಅಪಖ್ಯಾತಿ ಖಚಿತ.

ಇದಕ್ಕೆ ಉದಾಹರಣೆ ಪ್ರವಾಸಿಗರ ನೆಚ್ಚಿನ ತಾಣವಾದ ಚೇಲಾವರ ಜಲಪಾತ. ಚೆಯ್ಯಂಡಾಣೆಯಿಂದ ಸುಮಾರು 3 ಕಿ.ಮೀ. ಸಾಗಿದರೆ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಸುತ್ತಲ ವನರಾಶಿ, ಮುಗಿಲೆತ್ತರದ ಬೆಟ್ಟಗಳು, ನಡುವೆ ಬೆಳ್ನೂರೆಯುಕ್ಕಿಸುತ್ತಾ, ಭೋರ್ಗ ರೆಯುತ್ತಾ, ರಭಸದಿಂದ ಹರಿಯುತ್ತಿರುವ ಜಲಪಾತ, ಆಳ ಪ್ರಪಾತ, ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ರುದ್ರರಮಣೀಯ ಸುಂದರ ದೃಶ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮಳೆಗಾಲದ ಆರಂಭದಲ್ಲಿ, ರಜಾ ದಿನಗಳಲ್ಲಿ ಇಲ್ಲಿ ಪ್ರವಾಸಿಗರ ದಂಡೇ ನೆರೆದಿರುತ್ತದೆ. ಇಲ್ಲಿ ಜಲ ಕ್ರೀಡೆ ಯಾಡುವವರು, ಬೇಡವೆನ್ನುವವರು, ಎಲ್ಲರಿಗೂ ಏನೋ ಉತ್ಸಾಹ, ಸಂಭ್ರಮ. ಆದರೆ ಯಾರಿಗೂ ಇಲ್ಲಿನ ಅಪಾಯದ ಅರಿವು ಇಲ್ಲ. ನೀರಿಗಿಳಿದವರಲ್ಲಿ ಒಂದಿಬ್ಬರು ಅಂತರ್ಗತನಾದಾಗ ವಾಸ್ತವದ, ಅಪಾಯದ ಅರಿವಾಗುತ್ತದೆ. ಅಷ್ಟರಲ್ಲಿ ಅಮಾಯಕರ ಪ್ರಾಣ ಬಲಿ ನಡೆದಿರುತ್ತದೆ. ಇಲ್ಲಿಯವರೆಗೆ ಅಲ್ಲಿ ನಡೆದದ್ದು ಹಾಗೆಯೇ. ಚೇಲಾವರ ಜಲಪಾತದ ಇತಿಹಾಸದಲ್ಲಿ ‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ಇಲ್ಲಿ ಪ್ರಾಣಕಳೆದುಕೊಂಡವರು ಬರೋಬರಿ 12 ಮಂದಿ. ಕಳೆದ ಎರಡು ವರ್ಷಗಳಲ್ಲಿ 7 ಜನ ಇಲ್ಲಿ ಸಾವಿಗೀಡಾಗಿದ್ದಾರೆ.

ಚಂದಕ್ಕೆ ಮರುಳಾಗದಿರಿ

ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತೊಂದಿದೆ. ಅದಕ್ಕೆ ಪೂರಕವಾಗಿದೆ ಚೇಲಾವರ ಜಲಪಾತ. ಹಾಲ್ನೊರೆಯಿಂದ ಉಕ್ಕಿ ಹರಿಯುವ ನೀರು ಎಲ್ಲರ ಮನಸೂರೆ ಗೊಳಿಸುವದು ಸತ್ಯ. ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಯಮ ಸದನದ ಕದ ತಟ್ಟುವದು ಖಚಿತ. ಜಲಪಾತದ ಅರ್ಧ ಭಾಗದಲ್ಲಿ ಸುಮಾರು 40 ಅಡಿ ಆಳದ ಭಯಾನಕ ಗುಂಡಿಯೊಂದಿದೆ. ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಸ್ಥಳವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂದಿಯಲ್ಲಿ ಸಿಲುಕಿ ಈಜು ತಿಳಿದಿದ್ದರೂ ಮೇಲೆ ಬರಲಾಗದೆ ಸಾವನ್ನಪ್ಪುತ್ತಾರೆ ಎನ್ನುತ್ತಾರೆ ಮುಳುಗು ತಜ್ಞರು. ಇಲ್ಲಿ ಸತ್ತವರ ಮೃತ ದೇಹವನ್ನು ಹೊರತೆಗೆಯಲು ಅಗ್ನಿ ಶಾಮಕದಳ ಮತ್ತು ಸ್ಥಳೀಯರು ರಾತ್ರಿ ಹಗಲು ಪರದಾಡಿರುವದನ್ನು ಕೂಡ ಮರೆಯುವಂತಿಲ್ಲ.

ಜಲಪಾತದ ಆಳ ಹುಡುಕಿದ ಗ್ರಾಮಸ್ಥರು

ಸುಮಾರು 80 ಅಡಿ ಎತ್ತರದಿಂದ ಧುಮುಕುವ ಜಲಪಾತದ ಕೆಳ ಭಾಗದಲ್ಲಿ ಬಂಡೆಗಳಿಂದಾವೃತವಾದ ಬೃಹದ್ದಾಕಾರದ, ಭಯಾನಕ ಗುಂಡಿ ನಿರ್ಮಾಣಗೊಂಡಿದೆ. ನೀರಿರುವ ಸಂದರ್ಭದಲ್ಲಿ ಬರುವ ಪ್ರವಾಸಿಗರಿಗೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ಅಪಾಯದ ಅರಿವಿಲ್ಲದೆ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಲಪಾತಕ್ಕೆ ಮೇಲಿನಿಂದ ನೀರು ಹರಿಯದ ಕಾರಣ ಚೇಲಾವರ ಗ್ರಾಮದ 15 ಜನರ ತಂಡ ಜಲಪಾತದ ಗುಂಡಿಯ ಆಳ ಹಾಗೂ ಕೆಳಗಿನ ಪರಿಸ್ಥಿತಿಯನ್ನು ತಿಳಿಯುವ ನಿಟ್ಟಿನಲ್ಲಿ ಇದರ ನೀರನ್ನು ಖಾಲಿ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು. ಅದರಂತೆ ಕಠಿಣ ದಾರಿಯಲ್ಲಿ ಡೀಸಲ್ ಪಂಪ್ ಹೊತ್ತೊಯ್ದು ಶ್ರಮ ವಹಿಸಿದರೂ ಅವರಿಗೆ ಕೇವಲ 20 ಅಡಿಗಳಷ್ಟು ನೀರನ್ನು ಮಾತ್ರ ಖಾಲಿ ಮಾಡಲು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಗುಂಡಿಯ ಕೆಳಭಾಗದ ದೃಶ್ಯ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಇಲ್ಲಿ ಮೋಜು ಹೆಚ್ಚು?

ಈ ಜಲಪಾತ ಪ್ರವಾಸಿಗರ ಸ್ವರ್ಗ ಎನ್ನಲಾಗುತ್ತಿದೆ. ಆದರೆ ಇಲ್ಲಿಗೆ ಮೋಜು ಮಾಡಲು ಆಗಮಿಸುವ ಪ್ರವಾಸಿಗರೇ ಹೆಚ್ಚು ಎನ್ನುವ ಮಾತುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಮೂರು ತರದ ಜನರಿದ್ದಾರೆ. ಸಂಸಾರಸ್ಥರು, ಮೊದಲು ಇಲ್ಲಿಗೆ ಭೇಟಿ ನೀಡುವವರು ಜಲಪಾತ ವೀಕ್ಷಿಸಿ ವಾಪಾಸಾಗುತ್ತಾರೆ. ಆದರೆ ಕೆಲವು ಯುವಕರು, ಯುವತಿಯರು ಜಲಕ್ರೀಡೆಯಾಡಲೆಂದೇ ಇಲ್ಲಿಗೆ ಬರುತ್ತಾರೆ. ಇವರಿಬ್ಬರಿಗೂ ಭಿನ್ನವಾದ ಒಂದು ತಂಡ ಇಲ್ಲಿಗೆ ಆಗಮಿಸುತ್ತದೆ. ಅವರಿಗೆ ಜಲಪಾತದ ಸೊಬಗು, ಜಲಕ್ರೀಡೆ ಯಾವದರ ಗೊಡವೆಯೂ ಇಲ್ಲ. ಜಲಪಾತದ ಮೇಲ್ಭಾಗದ ಬಂಡೆಗಳಲ್ಲಿ ಕುಳಿತು ಪಾನ ಪಾರ್ಟಿ ಮಾಡುತ್ತಿರುತ್ತಾರೆ. ತಾವು ಕುಡಿದು ಖಾಲಿಯಾದ ಖಾಲಿ ಶೀಶೆ ಎಲ್ಲೆಂದರಲ್ಲಿ ಹಾಕಿ, ಯುವತಿಯರು, ಮಹಿಳೆಯರು ಕಾಣಸಿಕ್ಕರೆ ವ್ಯಂಗ್ಯವಾಗಿ ಮಾತನಾಡುತ್ತಾ ತಮ್ಮದೇ ಪ್ರಪಂಚದಲ್ಲಿ ವಿಹÀರಿಸುತ್ತಾರೆ. ಕಾಡಿನೊಳಗೆ ಏಕೆ? ಮುಖ್ಯ ರಸ್ತೆಯ ಬದಿಗಳಲ್ಲಿಯೂ ಖಾಲಿ ಶೀಶೆಗಳು ಬಿದ್ದಿರುವದು ಇದಕ್ಕೆ ಸಾಕ್ಷಿಯಾಗಿದೆ.

ಸಿಬ್ಬಂದಿ ಕೊರತೆ

ಇಲ್ಲಿ ಹಲವರ ಪ್ರಾಣ ಹರಣವಾದ ನಂತರ ಜಿಲ್ಲಾಡಳಿತ ಅರಣ್ಯ ಇಲಾಖೆಯ ಸಿಬ್ಬಂದಿ ನೇಮಿಸಿದೆ. ಆದರೆ ನಾಲ್ಕೈದು ಜನರು ನಿರ್ವಹಿಸಬೇಕಾಗಿರುವ ಕಾರ್ಯವನ್ನು ಒಬ್ಬರೆ ಇಲ್ಲಿ ಮಾಡಬೇಕಾಗಿದೆ. ಪ್ರತಿ ನಿತ್ಯ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರ ವಾಹನ ನಿಲುಗಡೆ, ಅವರ ವಿವರಗಳ ದಾಖಲು ಸೇರಿದಂತೆ ಜಲಪಾತದ ನೀರಿನಲ್ಲಿ ಚೆಲ್ಲಾಟವಾಡುವ ಜನರನ್ನೂ ಇವರು ಗಮನಿಸಬೇಕು. ಕಿಷ್ಕಿಂಧೆÉ, ಏರು, ತಗ್ಗು ದಾರಿಯಲ್ಲಿ ಜಲಪಾತಕ್ಕೆ ಒಂದು ಬಾರಿ ಪ್ರಯಾಣಿಸುವದೇ ಕಷ್ಟಕರ. ಆದರೆ ಇವರು ದಿನದಲ್ಲಿ ಹಲವು ಸಲ ಇಲ್ಲಿ ಸಂಚರಿಸಬೇಕು. ಅದರೊಂದಿಗೆ ಅವರಿಗೆ ಕೂರಲು ಮಳೆಯಿಂದ ರಕ್ಷಣೆ ಪಡೆಯಲು ಯಾವದೇ ಸೂಕ್ತ ಸ್ಥಳವಿಲ್ಲ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದರೆ ಸಂಜೆಯವರೆಗೆ ರಸ್ತೆಯಲ್ಲಿಯೇ ಇವರ ಕಾಯಕ. ಛತ್ರಿಯೇ ಇವರಿಗೆ ರಕ್ಷಣೆ. ಇವರೊಂದಿಗೆ ಹೆಚ್ಚಿನ ಸಿಬ್ಬಂದಿ ನೇಮಿಸಿದಲ್ಲಿ ಪ್ರವಾಸಿಗರಿಗೆ ಸೂಕ್ತ ಮಾಹಿತಿ, ರಕ್ಷಣೆ ನೀಡಲು ಸಾಧ್ಯವಾಗಬಹುದು ಎಂಬದು ಪ್ರವಾಸಿಗರ ಅಭಿಪ್ರಾಯ.

ಶುಲ್ಕವೂ ಇಲ್ಲ, ಸೌಲಭ್ಯವೂ ಇಲ್ಲ

ಎಲ್ಲಾ ಪ್ರವಾಸಿ ಕೇಂದ್ರಗಳಲ್ಲಿ ವಾಹನಗಳಿಗೆ ಶುಲ್ಕ. ಪ್ರವಾಸಿಗರಿಗೆ ಒಳ ಪ್ರವೇಶಿಸಲು ಟಿಕೆಟ್ ಪಡೆಯಬೇಕಾದ ವ್ಯವಸ್ಥೆ ಇದೆ. ಆದರೆ ಇಲ್ಲಿ ಯಾವ ಶುಲ್ಕವೂ ಇಲ್ಲ. ಸೌಲಭ್ಯವೂ ಇಲ್ಲ ಎಂಬಂತಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ರೂ. 3 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ ರಸ್ತೆ ಬದಿ ಹೊಂಡಕ್ಕೆ ಮಣ್ಣು ತುಂಬಿಸುವ ಕೆಲಸ ಹಾಗೆಯೇ ಉಳಿದಿದೆ. ಕೆಲವು ಅಂತರದಲ್ಲಿ ಸಿಮೆಂಟ್ ರಸ್ತೆ ರಚಿಸಲಾಗಿದೆ. ಆದರೆ, ಈ ಸಿಮೆಂಟ್ ರಸ್ತೆಗಳು ಎತ್ತರಕ್ಕೆ ನಿರ್ಮಾಣಗೊಂಡಿದ್ದು, ಎರಡೂ ಬದಿಯ ತಗ್ಗಿನಲ್ಲಿ ಚರಂಡಿ ರಚನೆಗೊಂಡಿದೆ. ವಾಹನಗಳು ಅಪ್ಪಿ ತಪ್ಪಿ ಬದಿಗೆ ಸರಿದರೆ ಅಪಾಯ ಕಟ್ಟಿಟ್ಟ ಬುತ್ತಿ! ಇದು ವಾಹನ ಚಾಲಕರಿಗೆ ಸಮಸ್ಯೆಯಾಗಿದೆ. ಕೂಡಲೇ ಈ ಬಗ್ಗೆ ಸಂಬಂಧಿತ ಇಲಾಖೆ ಜಾಗೃತಿಗೊಳ್ಳಲಿ. ಮೂಲಭೂತ ಸೌಲಭ್ಯ ನೀಡಲಿ. ಶುಲ್ಕ ವಸೂಲಿ ಮಾಡಲಿ ಎಂಬದು ಪ್ರವಾಸಿಗರ ಮಾತು.

ಇಲ್ಲಿನ ಪ್ರಾಣ ಹಾನಿ, ಸಮಸ್ಯೆಗಳ ಬಗ್ಗೆ ‘ಶಕ್ತಿ’ ಹಲವು ಬಾರಿ ಸಮಗ್ರ ವರದಿ ಪ್ರಕಟಿಸಿದ್ದರೂ ಸಿಬ್ಬಂದಿ ನೇಮಕ ಹೊರತುಪಡಿಸಿ ಯಾವದೇ ಬದಲಾವಣೆಯಾಗಿಲ್ಲ. ಆದುದರಿಂದ “ಪ್ರವಾಸಿಗರೇ ನಿಮ್ಮ ಜೀವ ನಿಮ್ಮಲ್ಲಿದೆ. ರಕ್ಷಣೆಯೂ ನಿಮ್ಮ ಕೈಯಲ್ಲಿದೆ. ಅತಿರೇಕದಿಂದ ಹದ್ದು ಮೀರಿ ವರ್ತಿಸಿದರೆ ನಿಮ್ಮನ್ನು ಆ ದೇವರು ಕೂಡ ರಕ್ಷಿಸಲಾರ ಜೋಕೆ...”