ಮಡಿಕೇರಿ, ನ. 16: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಪ್ರಕರಣ 11 ರಂತೆ ಮಾರುಕಟ್ಟೆ ಸಮಿತಿಯ ಅಧಿಕಾರ ಅವಧಿ ಪೂರ್ಣಗೊಂಡಿರುವದರಿಂದ ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ಕುಶಾಲನಗರ, ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ.

ತಾ. 21 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ತಾ. 22 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ತಾ. 24 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 4 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 7 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.

ನಾಮಪತ್ರವನ್ನು ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬಹುದಾಗಿದೆ.

ಚುನಾವಣಾ ಕ್ಷೇತ್ರಗಳು ಹಾಗೂ ಮೀಸಲಾತಿ ವಿವರ ಇಂತಿದೆ: ಮಡಿಕೇರಿ ತಾಲೂಕಿನಲ್ಲಿ ಪೆರಾಜೆ (ಸಾಮಾನ್ಯ), ಸಂಪಾಜೆ (ಅನುಸೂಚಿತ ಜಾತಿ), ಮಕ್ಕಂದೂರು (ಹಿಂದುಳಿದ ವರ್ಗ ಅ), ಮರಗೋಡು (ಹಿಂದುಳಿದ ವರ್ಗ ಬ), ಕಾಂತೂರು-ಮೂರ್ನಾಡು (ಸಾಮಾನ್ಯ), ಹಾಕತ್ತೂರು (ಮಹಿಳೆ), ಬೆಟ್ಟಗೇರಿ (ಸಾಮಾನ್ಯ). ಭಾಗಮಂಡಲ( ಅನುಸೂಚಿತ ಪಂಗಡ), ನಾಪೋಕ್ಲು (ಸಾಮಾನ್ಯ), ಕುಂಜಿಲ-ಕಕ್ಕಬೆ (ಮಹಿಳೆ), ನರಿಯಂಡಂಡ (ಸಾಮಾನ್ಯ) ಹಾಗೂ ಕಮಿಷನ್ ಏಜೆಂಟರುಗಳ ಮತ್ತು ವ್ಯಾಪಾರಿಗಳ ಕ್ಷೇತ್ರ ಒಂದು ಸದಸ್ಯ ಸ್ಥಾನ, ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರ ಒಂದು ಸದಸ್ಯ ಸ್ಥಾನ.

ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೊಡ್ಲಿಪೇಟೆ (ಸಾಮಾನ್ಯ), ಶನಿವಾರಸಂತೆ (ಮಹಿಳೆ), ಗೌಡಳ್ಳಿ (ಹಿಂದುಳಿದ ವರ್ಗ ಅ), ಬೇಳೂರು (ಸಾಮಾನ್ಯ), ಕಿರಗಂದೂರು (ಮಹಿಳೆ), ಹಾನಗಲ್ಲು (ಹಿಂದುಳಿದ ವರ್ಗ ಬ), ಶಾಂತಳ್ಳಿ (ಸಾಮಾನ್ಯ), ಹರದೂರು (ಸಾಮಾನ್ಯ) ಚೇರಳ ಶ್ರೀಮಂಗಲ (ಸಾಮಾನ್ಯ), ಕುಶಾಲನಗರ (ಅನುಸೂಚಿತ ಜಾತಿ), ಹೆಬ್ಬಾಲೆ (ಅನುಸೂಚಿತ ಪಂಗಡ), ಕಮಿಷನ್ ಏಜೆಂಟರುಗಳ ಮತ್ತು ವ್ಯಾಪಾರಿಗಳ ಕ್ಷೇತ್ರ ಒಂದು ಸದಸ್ಯ ಸ್ಥಾನ.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದಂತೆ ಅರಮೇರಿ (ಅನುಸೂಚಿತ ಜಾತಿ), ಚೆಂಬೆಬೆಳ್ಳೂರು (ಹಿಂದುಳಿದ ವರ್ಗ ಅ), ಅಮ್ಮತ್ತಿ (ಹಿಂದುಳಿದ ವರ್ಗ ಬ), ಪಾಲಿಬೆಟ್ಟ (ಅನುಸೂಚಿತ ಪಂಗಡ). ಬಿಟ್ಟಂಗಾಲ (ಮಹಿಳೆ), ಪೊನ್ನಂಪೇಟೆ (ಸಾಮಾನ್ಯ), ಬಾಳೆಲೆ (ಸಾಮಾನ್ಯ), ಕಾನೂರು (ಸಾಮಾನ್ಯ), ಹುದಿಕೇರಿ (ಸಾಮಾನ್ಯ), ಶ್ರೀಮಂಗಲ (ಸಾಮಾನ್ಯ), ಟಿ. ಶೆಟ್ಟಿಗೇರಿ (ಮಹಿಳೆ) ಹಾಗೂ ಕಮಿಷನ್ ಏಜೆಂಟರುಗಳ ಮತ್ತು ವ್ಯಾಪಾರಿಗಳ ಕ್ಷೇತ್ರ ಒಂದು ಸದಸ್ಯ ಸ್ಥಾನ.