ಪೊನ್ನAಪೇಟೆ, ಮೇ ೨೫ : ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸೆವೆನ್ ಎ ಸೈಡ್ ಅಂತರ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು, ಆತಿಥೇಯ ಗೋಣಿಕೊಪ್ಪಲು ಕಾವೇರಿ ಕಾಲೇಜು (ಬ್ಲೂ) ತಂಡದ ವಿರುದ್ಧ ೩-೧ ಗೋಲಿನ ಅಂತರದ ಜಯ ಸಾಧಿಸುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿ ಕೊಂಡಿತು. ಗೆಲುವಿಗಾಗಿ ಅಂತಿಮ ಕ್ಷಣದ ವರೆಗೂ ಹೋರಾಟ ನಡೆಸಿದ ಗೋಣಿಕೊಪ್ಪಲು ಕಾವೇರಿ ಕಾಲೇಜು (ಬ್ಲೂ) ತಂಡ ರನ್ನರ್ ಸ್ಥಾನಕ್ಕೆ ತೃಪಿ ಪಟ್ಟುಕೊಂಡಿತು.

ವಿಜೇತ ತಂಡದ ಪರ ನೇಹಲ್ ತಿಮ್ಮಯ್ಯ ,ಪ್ರತೀಕ್ ಪೂವಣ್ಣ ಮತ್ತು ನರೇನ್ ಕಾರ್ಯಪ್ಪ ತಲಾ ಒಂದೊAದು ಗೋಲು ಗಳಿಸಿ ಮಿಂಚಿದರು. ಕಾವೇರಿ ಕಾಲೇಜು ಪರ ವಿನೀತ್ ನಾಣಯ್ಯ ಏಕೈಕ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು, ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು ವಿರುದ್ಧ ೧-೦ ಗೋಲಿನಿಂದ ಜಯಭೇರಿ ಬಾರಿಸಿ ಫೈನಲ್‌ಗೆ ದಾಪುಗಾಲಿಟ್ಟಿತು. ಮತ್ತೊಂದು ಸೆಮಿಫೈನ¯ ನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು (ಬ್ಲೂ ) ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್) ತಂಡದ ವಿರುದ್ಧ ೩-೧ ಗೋಲುಗಳ ಜಯ ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಡಿಕೇರಿ ಎಫ್ ಎಂ ಕೆ ಎಂ ಸಿ ಕಾಲೇಜು, ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್) ವಿರುದ್ಧ ೫-೦ ಗೋಲುಗಳ ಭರ್ಜರಿ ಜಯ ಪಡೆಯಿತು. ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್) ೪ ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಫೇರ್ ಪ್ಲೇ ಟ್ರೋಫಿಯನ್ನು ಗೋಣಿಕೊಪ್ಪಲು ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿ

ಬೆಸ್ಟ್ ಗೋಲ್ ಕೀಪರ್ ಆಗಿ ಬೆಂಗಳೂರು ಸೆಂಟ್ ಜೋಸೆಫ್ ತಂಡದ ಧರ್ಮೇಂದ್ರ, ಬೆಸ್ಟ್ ಡಿಪೆಂಡರ್ ಆಗಿ ಗೋಣಿಕೊಪ್ಪಲು ಕಾವೇರಿ ಕಾಲೇಜು (ಬ್ಲೂ) ತಂಡದ ವಿನೀತ್ ನಾಣಯ್ಯ, ಹೈಯೆಸ್ಟ್ ಗೋಲ್ ಸ್ಕೋರರ್ ಆಗಿ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜಿನ ಚಸ್ವಿನ್ ಮುತ್ತಪ್ಪ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ ಸಮಾರಂಭ

ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ.ಇಟ್ಟೀರ ಕೆ.ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಭಾಗವಹಿಸಿ ಮಾತನಾಡಿ ಮನುಷ್ಯನಿಗೆ ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು, ಯುವ ಜನತೆ ಶಿಕ್ಷಣದ ಜೊತೆಗೆ ಕ್ರೀಡೆ, ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ತಮ್ಮ ಸರ್ವತೋಮುಖ ಬೆಳವಣಿಗೆಯನ್ನು ವೃದ್ಧಿಗೊಳಿಸಿಕೊಳ್ಳಬೇಕು. ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿ ಸಮಾಜದಲ್ಲಿ ಸತ್ಪçಜೆಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಈ ಸಂದರ್ಭ ಪೊನ್ನಂಪೇಟೆ ಸಿಐಟಿ ಕಾಲೇಜು ಕಾರ್ಯದರ್ಶಿ ಚಿರಿಯಪಂಡ ರಾಕೇಶ್ ಪೂವಯ್ಯ, ದಾನಿಗಳಾದ ಬಯವಂಡ ಮಹಾಬಲ, ಎನ್.ಗಿರೀಶ್, ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಮಾಳೇಟಿರ ಬಿ.ಕಾವೇರಪ್ಪ, ಉಪ ಪ್ರಾಂಶುಪಾಲೆ ಡಾ.ಎ.ಎಸ್.ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ.ಎಂ.ಎಸ್.ಭಾರತಿ, ಪಂದ್ಯಾವಳಿ ಸಂಚಾಲಕ ಮಿನ್ನಂಡ ಜೋಯಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಮಾಡ ಸಂತೋಷ್ ಇನ್ನಿತರರು ಹಾಜರಿದ್ದರು.

ತೀರ್ಪುಗಾರರಾಗಿ ಮೂಕಚಂಡ ನಾಚಪ್ಪ, ಕುಪ್ಪಂಡ ದಿಲನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಸಣ್ಣುವಂಡ ಲೋಕೇಶ್, ಅಂಕುರ್ ವಿನೋದ್ ಕಾರ್ಯನಿರ್ವಹಿಸಿದರು. ಎ.ಎ. ಪೊನ್ನಪ್ಪ ಮತ್ತು ನಾಯಕ್ ವೀಕ್ಷಕ ವಿವರಣೆ ನೀಡಿದರು.

-ಚನ್ನನಾಯಕ