ಮುಳ್ಳೂರು, ಮಾ. ೧೮: ಕೊಡಗು-ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ದಿನನಿತ್ಯ ಒಡನಾಟ ಹೊಂದಿರುವ ಸಕಲೇಶಪುರ ತಾಲೂಕಿಗೆ ಸೇರಿದ ಈಚಲಬೀಡು ಗ್ರಾಮದಲ್ಲಿ ತಾ. ೧೯ ರಂದು (ಇಂದು) ಸಕಲೇಶಪುರ ತಾಲೂಕು ಮಟ್ಟದ ‘ಮಲೆನಾಡು ಜಾನಪದ ಉತ್ಸವ’ ನಡೆಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷ ದೊಡ್ಡಮನೆ ಆನಂದ್ ಹೇಳಿದರು.

ಅವರು ಶನಿವಾರಸಂತೆ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಜಾನಪದ ಸೊಗಡು ದೇಶಿಯ ಸಂಸ್ಕೃತಿಯಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಜಾನಪದ ಉತ್ಸವಗಳನ್ನು ನಡೆಸಲಾಗುತ್ತಿದ್ದು ಈ ದಿಸೆಯಲ್ಲಿ ಸಕಲೇಶಪುರ ತಾಲೂಕು ಘಟಕದ ವತಿಯಿಂದ ತಾ. ೧೯ ರಂದು (ಇಂದು) ಕೊಡಗು-ಹಾಸನ ಗಡಿಭಾಗದಲ್ಲಿರುವ ಈಚಲಬೀಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಮಲೆನಾಡು ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಲೆನಾಡು ಜಾನಪದ ಉತ್ಸವ ದೊಡ್ಡಮಟ್ಟದಲ್ಲಿ ನಡೆಯುತ್ತದೆ ರಾಜ್ಯ, ಜಿಲ್ಲೆ, ಅಕ್ಕಪಕ್ಕದ ಜಿಲ್ಲೆಯ ಕಡೆಗಳಿಂದಲೂ ಜಾನಪದ ಉತ್ಸವದಲ್ಲಿ ಜನರು ಪಾಲ್ಗೊಳ್ಳಲಿದ್ದು, ಸುಗ್ಗಿ ಕುಣಿತ, ಕುಣಿ ಮಿಣಿ ವಾದ್ಯ, ಉಮ್ಮತಾಟ್, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಕೋಲಾಟ, ತಂಬೂರಿ ಪದ, ಚಿಟ್ಟಿಮೇಳ, ಕರಗ ನೃತ್ಯ, ಸೋಮನಕುಣಿತ, ವೀರಗಾಸೆ, ಲಂಬಾಣಿ ನೃತ್ಯ, ಗೀಗಿ ಪದ, ರಾಗಿ ಬೀಸುವ ಪದ ಮುಂತಾದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಜಾನಪದ ಉತ್ಸವದಲ್ಲಿ ೪ ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.

ಗೌರವ ಸಲಹೆಗಾರ ಕಳಲೆ ಕೃಷ್ಣೇಗೌಡ ಮಾತನಾಡಿ, ತಾ ೧೯ ರಂದು ಬೆಳಿಗ್ಗೆ ೯.೩೦ ಗಂಟೆಗೆ ನಡೆಯಲಿರುವ ಮಲೆನಾಡು ಜಾನಪದ ಉತ್ಸವದ ಮೆರವಣಿಗೆಯನ್ನು ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಮಲೆನಾಡು ಜಾನಪದ ಉತ್ಸವದ ಸಮಾರಂಭದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶನಿವಾರಸಂತೆ ಶ್ರೀ ಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಇವರುಗಳು ಸಾನಿಧ್ಯ ವಹಿಸಲಿದ್ದು ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ರಾಮಚಂದ್ರಗೌಡ ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಗಣ್ಯರು ಆಗಮಿಸುತ್ತಾರೆ ಮಲೆನಾಡು ಜಾನಪದ ಉತ್ಸವವನ್ನು ಯಶಸ್ವಿಗೊಳಿಸಲು ಕೊಡಗು ಜಿಲ್ಲೆಯ ಜನರು ಸಹ ಸಹಕರಿಸುವಂತೆ ಅವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ಜಾನಪದ ಪರಿಷತ್ತಿನ ಎಚ್.ಕೆ.ದಿನೇಶ್, ಎಚ್.ಬಿ.ರಾಮೇಗೌಡ ಹಾಜರಿದ್ದರು.