ಸೋಮವಾರಪೇಟೆ, ಜ. ೨೪: ಪಟ್ಟಣದ ಮನೆಯೊಂದನ್ನು ಬಾಡಿಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ಧಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಧೆ ನಡೆಸುತ್ತಿದ್ದ ಆರೋಪಿಗಳಾದ ಮೂಲತಃ ಮಡಿಕೇರಿಯ ರಾಜೇಶ್ ಎಂಬಾತನ ಪತ್ನಿ ಜಾನಕಿ ಮತ್ತು ಪಟ್ಟಣದಲ್ಲಿ ಟ್ರಾವೆಲ್ಸ್ ವಾಹನ ಚಾಲಿಸುತ್ತಿದ್ದ ಸ್ಥಳೀಯ ನಿವಾಸಿ ಕರ್ಪಸ್ವಾಮಿ ಅಲಿಯಾಸ್ ಕೃಷ್ಣ ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣದ ಹೇಮಂತ್ ಎಂಬಾತನೊAದಿಗೆ ಸೇರಿಕೊಂಡು ವ್ಯವಹಾರ ನಡೆಸುತ್ತಿದ್ದ ಆರೋಪಿಗಳು, ಗಿರಾಕಿಗಳಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಪಿರಿಯಾಪಟ್ಟಣದ ಹೇಮಂತ್ ಎಂಬಾತ ೫೦೦ ರೂಪಾಯಿ ಪಡೆದು

(ಮೊದಲ ಪುಟದಿಂದ) ಕುಶಾಲನಗರದ ೩೬ ವರ್ಷದ ಮಹಿಳೆಯನ್ನು ಜಾನಕಿ ವಾಸವಿದ್ದ ಮನೆಗೆ ಕಳುಹಿಸುತ್ತಿದ್ದ ಎನ್ನಲಾಗಿದ್ದು, ಆರೋಪಿ ಕೃಷ್ಣ ಗಿರಾಕಿಗಳಿಗೆ ಮಾಹಿತಿ ನೀಡಿ ಕರೆಸಿಕೊಳ್ಳುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳಾದ ಜಾನಕಿ ಮತ್ತು ಕೃಷ್ಣನನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಮತ್ತೋರ್ವ ಆರೋಪಿ ಹೇಮಂತ್ ತಲೆಮರೆಸಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್, ಮುಖ್ಯಪೇದೆ ವೆಂಕಟ್, ಸಿಬ್ಬಂದಿಗಳಾದ ಅನಂತ್, ನವೀನ್, ವೀಣಾ, ಲೀಲಾಂಬಿಕೆ, ನದಾಫ್ ಭಾಗವಹಿಸಿದ್ದರು.