ಸೋಮವಾರಪೇಟೆ,ಜು.19: ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದರೂ ಸಹ ತಾಲೂಕಿನಾದ್ಯಂತ ಕೃಷಿ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಈವರೆಗೆ 2100 ಹೆಕ್ಟೇರ್‍ನಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.

ರೈತರಿಗೆ ಸಲಹೆ: ರೈತರು ನಾಟಿ ಮಾಡುವ ಮೊದಲು ಭತ್ತದ ಸಸಿ ಮಡಿಗಳಲ್ಲಿ ಬೆಂಕಿರೋಗ, ಕೊಳವೆಗಳು, ಥ್ರಿಬ್ಸ್ ಕೀಟಗಳ ಬಾಧೆ ಕಂಡುಬರುವ ಸಾಧ್ಯತೆ ಇರುವದರಿಂದ, ನಾಟಿ ಮಾಡುವ ಒಂದು ವಾರ ಮುನ್ನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.

10ಲೀಟರ್ ನೀರಿಗೆ 10ಗ್ರಾಂ ಬ್ಯಾವೆಸ್ಟಿನ್ ಅಥವಾ 6ಗ್ರಾಂ ಟ್ರೈಸೈಕ್ಲೋಜೋಲ್ ಮತ್ತು 20ಮಿ.ಲೀ ಕ್ಲೋರೋಫೈರಿಫಾಸ್ ಅಥವಾ ಎಕಾಲೆಕ್ಸ್ ಮಿಶ್ರಣ ಮಾಡಿ ಸಿಂಪಡಣೆ ಮಾಡಿದರೆ, ರೋಗ ಮತ್ತು ಕೀಟ ಬಾಧೆ ತಡೆಗಟ್ಟಬಹುದು. ನಾಟಿ ಮಾಡಿ ತಿಂಗಳ ನಂತರ 100 ಲೀ ನೀರಿಗೆ 100ಗ್ರಾಂ ಬ್ಯಾವೆಸ್ಟಿನ್ ಅಥವಾ 60 ಟ್ರೈಸೈಕ್ಲೋಜೋಲ್ ಮತ್ತು 200 ಮಿ.ಲೀ ಕ್ಲೋರೋಫೈರಿಫಾಸ್ ಅಥವಾ ಎಕಾಲೆಕ್ಸ್ ಮಿಶ್ರಣ ಮಾಡಿ ಒಂದು ಏಕರೆ ಪ್ರದೇಶಕ್ಕೆ ಸಿಂಪಡಿಸಬೇಕು. ಇದರಿಂದ ಬೆಂಕಿರೋಗ ಹಾಗೂ ಕೀಟಬಾಧೆಯನ್ನು ತಡೆಗಟ್ಟಬಹುದು.

ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ನಾಟಿ ಮಾಡುವಾಗ 25-30 ದಿನಗಳ ಪೈರನ್ನು ನಾಟಿ ಮಾಡಬೇಕು. ಒಂದು ಚದರ ಮೀಟರ್‍ಗೆ 50 ಗುಣಿ ಬರುವಂತೆ, ಪ್ರತಿ ಗುಣಿಗೆ 2 ರಿಂದ 3 ಸಸಿಗಳನ್ನು ಸೇರಿಸಿ 2 ಇಂಚು ಆಳದಲ್ಲಿ ನಾಟಿ ಮಾಡಬೇಕು. ಇದರಿಂದ ಉತ್ತಮ ಇಳುವರಿ ಪಡೆಯಬಹುದು. ಕೃಷಿ ಇಲಾಖೆಯಿಂದ 2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 800 ಕ್ವಿಂಟಾಲ್ ಅಧಿಕ ಇಳುವರಿ ನೀಡುವ ಭತ್ತದ ಬಿತ್ತನೆ ಬೀಜಗಳಾದ ತುಂಗಾ, ತನು, ಅತೀರ, ಹೈಬ್ರೀಡ್ ತಳಿಗಳಾದ ವಿಎನ್‍ಆರ್ 2233 ನೀಡಲಾಗಿದೆ.

4 ಸಾವಿರ ಹೆಕ್ಟೇರ್‍ನಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಇದ್ದು, 3050 ಹೆಕ್ಟೇರ್ ಬಿತ್ತನೆಯಾಗಿದೆ. ಮುಸುಕಿನ ಜೋಳ ತಳಿಗಳಾದ ಗಂಗಾ ಕಾವೇರಿ, ಜಿಕೆ 3164, ಸಿಪಿ818, ಪೈನಿಯರ್ 30ಬಿ07, ಕಾವೇರಿ ಸೀಡ್ಸ್ ತಳಿಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ. ಬೆಳೆ ಬೆಳವಣಿಗೆಯ ಹಂತದಲ್ಲಿದ್ದು, ಎಲೆ ಚುಕ್ಕಿ ರೋಗ, ಬೂದಿ ರೋಗ ಹಾಗೂ ಕೀಟ ಬಾಧೆ ಕಂಡುಬಂದಲ್ಲಿ 10 ಗ್ರಾಂ ನೀರಿಗೆ 30 ಗ್ರಾಂ ಡೈಥೇನ್ ಎಂ45 ಹಾಗೂ 20 ಮಿ.ಲೀ ಕ್ಲೋರೋಫೈರಿಫಾಸ್ ಅಥವಾ ಹಾಮ್ಲ ಕೀಟನಾಶವನ್ನು ಮಿಶ್ರಣ ಮಾಡಿ ಸಿಂಪಡಿಸಬೇಕೆಂದು ಡಾ. ರಾಜಶೇಖರ್ ಅವರು ರೈತರಿಗೆ ಸಲಹೆ ನೀಡಿದ್ದಾರೆ.