ಗೋಣಿಕೊಪ್ಪಲು, ಅ. 20 : ಮಾಲ್ದಾರೆ ಬಿ. ಟಿ. ಕಾಡು ತೋಟದಲ್ಲಿ ಸೇರಿಕೊಂಡಿರುವ ಹುಲಿಯನ್ನು ಹಿಡಿಯಲು ತಿತಿಮತಿ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಮೊದಲ ದಿನ ವಿಫಲವಾಗಿದೆ.ದೀಪಾವಳಿ ಪಟಾಕಿ ಶಬ್ದಕ್ಕೆ ಹೆದರಿದ ಹುಲಿ ಬೋನ್‍ನತ್ತ ಸುಳಿಯದೆ ಕಾರ್ಯಾಚರಣೆ ತಂಡಕ್ಕೆ ನಿರಾಸೆ ಮೂಡುವಂತೆ ಮಾಡಿದೆ. 2 ನೇ ದಿನ ಕಾರ್ಯಾಚರಣೆ ಮುಂದುವರಿದಿದೆ. ಶುಕ್ರವಾರ ರಾತ್ರಿ ಕೂಡ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮ ವಿರುವದರಿಂದ ಹುಲಿ ಬರಬಹುದೋ ಎಂಬ ಸಂಶಯ ಎದುರಾಗಿದೆ. ದೀಪಾವಳಿ ಪ್ರಯುಕ್ತ ಸ್ಥಳೀಯವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರಿಂದ ರಾತ್ರಿ ಪಟಾಕಿ ಹಾಗೂ ಹಾಡುಗಳ ಶಬ್ದ ಹುಲಿಯನ್ನು ಬೋನ್‍ನತ್ತ ಸುಳಿಯ ದಂತೆ ಮಾಡಿತು. ಬೋನ್‍ನ ಸಮೀಪ ಬಾರದೆ ಬೆಟ್ಟಕ್ಕೆ ಹಿಂತಿರುಗಿದೆ ಎಂದು ತಿಳಿದುಬಂದಿದೆ.