ಮಡಿಕೇರಿ, ಸೆ. 13: ದುಬಾರೆಯಲ್ಲಿ ಅಕ್ಟೋಬರ್ 1 ರಂದು ಈ ವರ್ಷವೂ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆ ಮೂಲಕ ಕಾಫಿಯ ಸ್ವಾದಿಷ್ಟವನ್ನು ಪ್ರವಾಸಿಗರಿಗೆ ಪರಿಚಯಿಸಲು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ತೀರ್ಮಾನಿಸಿದೆ.

ಗುಡ್ಡೆಹೊಸೂರಿನಲ್ಲಿ ಜರುಗಿದ ಕೊಡಗು ಮಹಿಳಾ ಜಾಗೃತಿ ಸಂಘದ 15 ನೇ ವಾರ್ಷಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕಳೆದ ವರ್ಷ ಸಂಘವು ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆ ಯಶಸ್ವಿಯಾಗಿದ್ದು ಈ ವರ್ಷ ಅ.1 ರಂದು ದುಬಾರೆಯಲ್ಲಿ ಕಾಫಿ ಮಾರಾಟ, ಕಾಫಿ ಉತ್ಪನ್ನಗಳ ಪ್ರದರ್ಶನ ಮಳಿಗೆಯನ್ನು ತೆರೆಯಲು ನಿರ್ಧರಿಸಲಾಯಿತು.

ಮಹಾಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ, ಪ್ರಸ್ತುತ ಸಂಘದಲ್ಲಿ 400 ಕ್ಕೂ ಅಧಿಕ ಮಹಿಳಾ ಸದಸ್ಯೆಯರಿದ್ದಾರೆ. ಹೊಸದಾಗಿ ಹಲವಾರು ಮಹಿಳೆಯರು ಸಂಘ ಸೇರುತ್ತಿರುವ ಮೂಲಕ ಸಂಘವನ್ನು ಮತ್ತಷ್ಟು ಪ್ರಬಲಗೊಳಿಸಿದ್ದಾರೆ. ಈ ಮೂಲಕ ಕಾಫಿಯ ಮಹತ್ವವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸಂಘ ದಾಪುಗಾಲಿಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ ಮಾತನಾಡಿ ಸುಸ್ಥಿರ ಕೃಷಿಯ ಬಗ್ಗೆ ಹೊರಜಿಲ್ಲೆಗಳಲ್ಲಿ ಮುಖ್ಯವಾಗಿ ಸಾಗರ, ಶಿರಸಿ ವ್ಯಾಪ್ತಿಯಲ್ಲಿ ಗಮನಾರ್ಹ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಕಾಫಿ ಬೆಳೆಗಾರ ಮಹಿಳೆಯರು ಇಂತಹ ಕೃಷಿ ಪ್ರದೇಶಗಳಿಗೆ ಅಧ್ಯಯನ ಭೇಟಿ ನೀಡುವಂತೆ ಸಲಹೆ ನೀಡಿದರು.

10 ವರ್ಷಗಳಿಂದ ಕಾಫಿ ದರ ಒಂದೇ ರೀತಿಯಿದೆಯಾದರೂ ಕಾಫಿ ತೋಟಗಳ ನಿರ್ವಹಣೆ, ರಾಸಾಯನಿಕಗಳ ದರ, ಕಾರ್ಮಿಕರ ವೇತನ ಮಾತ್ರ ಹೆಚ್ಚುತ್ತಲೇ ಇದೆ. ಈ ಪರಿಸ್ಥಿತಿಯಲ್ಲಿ ಕಾಫಿಯ ಉತ್ಪಾದನೆ ಹೆಚ್ಚುವದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಕಾಫಿ ಕೃಷಿಗೆ ಗಂಡಾಂತರ ಖಂಡಿತಾ ಎಂದು ಅನಿತಾ ನಂದ ಎಚ್ಚರಿಸಿದರು.

ಸಂಘದ ಮಾಜಿ ಅಧ್ಯಕ್ಷೆ ಚಂದ್ರಮತಿ ಗಣೇಶ್ ಮಾತನಾಡಿ, ಸಂಘದ ಈ ಹಿಂದಿನ ಬೇಡಿಕೆಯಂತೆ ಇದೀಗ ಕಾಫಿ ಮಂಡಳಿಗೆ ಬೆಳೆಗಾರರೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆದರೆ, ಕಾಫಿ ಮಂಡಳಿಯಲ್ಲಿ ಅಧ್ಯಕ್ಷರಿಗೆ ಗುರುತರ ಜವಾಬ್ದಾರಿಕೆಯನ್ನೇ ನೀಡದೇ ಕಾರ್ಯದರ್ಶಿಗೆ ಎಲ್ಲಾ ಹೊಣೆ ನೀಡಲಾಗಿದೆ. ಇಂತಹ ಪರಿಸ್ಥಿತಿ ಬದಲಾಗಿ ಕಾಫಿ ಮಂಡಳಿಯಲ್ಲಿನ ಬೆಳೆಗಾರರೇ ಆಗಿರುವ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ದೊರಕುವಂತಾಗಬೇಕೆಂದು ಒತ್ತಾಯಿಸಿದರು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಖಚಾಂಚಿ ಭಾವನಾ ಪ್ರವೀಣ್ ಸಂಘದ ಲೆಕ್ಕಪತ್ರ ಮಂಡಿಸಿದರು. ಸಂಘವು ಆರ್ಥಿಕ ಸಾಲಿನಲ್ಲಿ 1.81 ಲಕ್ಷ ವಹಿವಾಟು ಕೈಗೊಂಡು 67 ಸಾವಿರ ರೂ. ಲಾಭ ಗಳಿಸಿದ್ದಾಗಿ ಅವರು ಮಾಹಿತಿ ನೀಡಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಕಾಫಿಯ ಮಹತ್ವ, ಮಾರಾಟ ವ್ಯವಸ್ಥೆಯನ್ನು ವಿಸ್ತರಿಸುವ ನಿಟ್ಟಿನಲ್ಲಿಯೂ ಸಂಘದ ಮಹಿಳಾ ಸದಸ್ಯೆಯರು ವಾರ್ಷಿಕ ಸಭೆಯಲ್ಲಿ ಸಲಹೆ ನೀಡಿದರು.

ಕಳೆದ ವರ್ಷದ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆಯ ಯಶಸ್ಸಿಗೆ ಸಹಕರಿಸಿದ ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಅವರನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಅನಿಲ್ ಹೆಚ್.ಟಿ., ಜಿಲ್ಲೆಯ ಹೊಟೇಲ್, ರೆಸಾರ್ಟ್, ಹೋಂಸ್ಟೇಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಂಘದ ಸದಸ್ಯೆಯರು ಉತ್ತಮ ಕಾಫಿ ತಯಾರಿಕಾ ಕಾರ್ಯಾಗಾರ ಆಯೋಜಿಸುವಂತೆ ಸಲಹೆ ನೀಡಿದರು. ಕಾಫಿ ಜಿಲ್ಲೆ ಎನಿಸಿದ ಕೊಡಗಿನಲ್ಲಿಯೇ ಕಾಫಿ ಬಳಕೆ ಕಡಿಮೆಯಿದ್ದು, ಜಿಲ್ಲೆಯ ಜನತೆ ಮೊದಲು ಕಾಫಿ ಕುಡಿಯುವ ಮೂಲಕ ತಾವೇ ಉತ್ಪಾದಿಸುವ ಬೆಳೆಗೆ ಸೂಕ್ತ ವ್ಯಾಪಾರ ಮಾರುಕಟ್ಟೆ ಕಂಡುಕೊಳ್ಳುವದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಪಾಲೆಕಂಡ ಅನಿತಾ ಅಯ್ಯಣ್ಣ, ನೂತನ ಜಂಟಿ ಕಾರ್ಯದರ್ಶಿ ಜ್ಯುತಿಕ ಬೋಪಣ್ಣ ಹಾಜರಿದ್ದರು

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಮೂರು ವರ್ಷಗಳ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪಂದಿಕುಟ್ಟೀರ ಚಿತ್ರಾ ಸುಬ್ಬಯ್ಯ ಅಧ್ಯಕ್ಷೆಯಾಗಿ, ಅಪ್ಪನೆರವಂಡ ಅನಿತಾ ನಂದಾ ಪ್ರಧಾನ ಕಾರ್ಯದರ್ಶಿಯಾಗಿ, ಭಾವನಾ ಪ್ರವೀಣ್ ಖಚಾಂಚಿಯಾಗಿ ಮರು ಆಯ್ಕೆಯಾಗಿದ್ದು, ಮುಕ್ಕಾಟೀರ ಜ್ಯುತಿಕ ಬೋಪಣ್ಣ ಜಂಟಿಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸುಂಟಿಕೊಪ್ಪ, ಚೆಟ್ಟಳ್ಳಿ ವಲಯ ಘಟಕದ ಮುಖ್ಯಸ್ಥೆಯಾಗಿ ಸುಮಾ ತಿಮ್ಮಯ್ಯ, ಪಾಲಿಬೆಟ್ಟ ವಲಯ ಘಟಕದ ಮುಖ್ಯಸ್ಥೆಯಾಗಿ ಅನಿತಾ ಸುರೇಶ್ ನೇಮಕಗೊಂಡರು. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸದಸ್ಯೆಯರನ್ನು ಸಂಘಟಿಸಿ ಕಾಫಿ ಸಂಬಂಧಿತ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗುತ್ತದೆ ಎಂದು ಅಧ್ಯಕ್ಷೆಯಾಗಿ ಮರು ಆಯ್ಕೆಯಾದ ಚಿತ್ರಾ ಸುಬ್ಬಯ್ಯ ತಿಳಿಸಿದರು.