ಮಡಿಕೇರಿ, ಜೂ. 11: ಮಾವಿನ ಹಣ್ಣು ಇತರ ತರಕಾರಿ ಬೆಳೆಗಳಿಗೆ ಅತಿಯಾದ ರಾಸಾಯನಿಕ ಕೀಟ ನಾಶಕಗಳ ಬಳಕೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುವ ಭೀತಿ ಎದುರಾಗಿದೆ. ಕಷ್ಟಪಟ್ಟು ಬೆಳೆದ ಮಾವಿನ ಹಣ್ಣು ಹಾಗೂ ತರಕಾರಿಗಳಿಗೆ ಹೆಚ್ಚಿನ ಪ್ರಮಾಣದ ಕೀಟ ನಾಶಕಗಳು ಬಳಕೆಯಾಗುತ್ತಿದ್ದು, ಭಾರತೀಯ ಮಾವುವಿನಲ್ಲಿ “ಗ್ಲೋಬಲ್ ಸ್ಟಾಂಡರ್ಡ್” ಮಿತಿಗೂ ಹೆಚ್ಚಿನ ಕ್ರಿಮಿನಾಶಕದ ಅಂಶ ಕಂಡುಬಂದಿದೆ ಎನ್ನುವ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಫ್ತ್ತುದಾರರಿಗೆ ಪರಿಸರ ಸಚಿವಾಲಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎಚ್ಚರಿಕೆಯ ನೋಟಿಸ್ ನೀಡಿರುವದು ಗೊತ್ತಾಗಿದೆ.

ಭಾರತದಿಂದ ರಫ್ತಾದ ಮಾವು ಮಾತ್ರವಲ್ಲದೆ ಮೆಣಸಿನಕಾಯಿ, ಮೆಣಸು, ಸೌತೆಕಾಯಿಯಲ್ಲೂ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಕ್ರಿಮಿನಾಶಕ ಅಂಶವು ಪತ್ತೆಯಾಗಿದೆ. ಇದು ಪುನಾರಾವರ್ತನೆಯಾದರೆ ನಿಷೇಧದ ಭೀತಿ ಎದುರಿಸಬೇಕಾಗುತ್ತದೆ. ಭಾರತೀಯ ಒಟ್ಟು ಮಾವು ರಫ್ತಿನ ಶೇ. 70 ಭಾಗ ಯುಎಇ ಪಾಲು ಇದ್ದು, ನಿರ್ಬಂಧ ಹೇರಿದ್ದೇ ಆದಲ್ಲಿ ದೊಡ್ಡ ಪ್ರಮಾಣದ ನಷ್ಟವನ್ನು ಭಾರತದ ಬೆಳೆಗಾರರು ಅನುಭವಿಸಬೇಕಾಗುತ್ತದೆ.

ತೋಟಗಾರಿಕೆ ಇಲಾಖೆಯಿಂದ ಅತಿಯಾದ ಕೀಟನಾಶಕ ಔಷಧಿಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಹಲವಾರು ಮಾಹಿತಿ ಕಾರ್ಯಾಗಾರಗಳನ್ನು ಗ್ರಾಮೀಣ ಮಟ್ಟದಲ್ಲಿ ಏರ್ಪಡಿಸಿದ್ದು, ಇನ್ನೂ ಕೂಡ ಮಾಹಿತಿ ಕೊಡುವದರ ಜೊತೆಗೆ ರಾಸಾಯನಿಕ ಕಡಿಮೆ ಮಾಡುವದು ಇಲಾಖೆಯ ಗುರಿಯಾಗಿದೆ. ಇದಕ್ಕೆಲ್ಲಾ ಪರಿಹಾರ “ಸಮಗ್ರ ಪೋಷಕಾಂಶಗಳ ನಿರ್ವಹಣೆ” ಬಗ್ಗೆ ತಿಳಿಸಲಾಗಿತ್ತು.

ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಕೊಡಗು ಜಿಲ್ಲೆಯ ಮುಖ್ಯ ತೋಟಗಾರಿಕೆ ಬೆಳೆಗೆ ಬೇಕಾದ ವಿವಿಧ ಪರಿಕರಗಳು ಪ್ರಮಾಣ ಬಳಕೆಯಾಗುವ ಸಮಯ ಕೂಡ ತಿಳಿಸಿಕೊಡುತ್ತೇವೆ. ರೈತ ಭಾಂದವರು ಸಂದರ್ಭಕ್ಕೆ ತಕ್ಕಂತೆ ಯೋಚಿಸಿ ಒಳ್ಳೆಯ ನಿರ್ಧಾರ ತೆಗೆಯುವಿರೆಂದು ನಂಬುತ್ತೇವೆ. ನೀವು ತೆಗೆದುಕ್ಕೊಳುವ ನಿರ್ಧಾರದಲ್ಲಿ ನಿಮ್ಮ ಹಾಗೂ ದೇಶದ ಭವಿಷ್ಯ ಅಡಗಿದೆ.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ದೂ.ಸಂಖ್ಯೆ: 08272-228432, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಮಡಿಕೇರಿ ದೂ:08272-220555, ಹಾರ್ಟಿ ಕ್ಲಿನಿಕ್ (ಮಾಹಿತಿ ಮತ್ತು ಸಲಹಾ ಕೇಂದ್ರ) ದೂ:08272-220232, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಸೋಮವಾರಪೇಟೆ ದೂ:08276-281364, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಪೊನ್ನಂಪೇಟೆ ದೂ:08274-249637 ರವರನ್ನು ಸಂಪರ್ಕಿಸ ಬಹುದು ಎಂದು ತೋಟಗಾರಿಕೆ ಇಲಾಖೆಯ ಮಾಹಿತಿ ಮತ್ತು ಸಲಹ ಕೇಂದ್ರದ ವಿಷಯ ತಜ್ಞರು ತಿಳಿಸಿದ್ದಾರೆ.