ಸುಂಟಿಕೊಪ್ಪ, ಮೇ 27: ಬೆಂಗಳೂರು, ಬೈಲುಕೊಪ್ಪ ತಂಡಗಳು ಇಲ್ಲಿ ನಡೆಯುತ್ತಿರುವ 21 ನೇ ವರ್ಷದ ಡಿ. ಶಿವಪ್ಪ ಸ್ಮರಣಾರ್ಥ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ.

ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈಗಲ್ ಎಫ್ ಸಿ ಬೆಂಗಳೂರು ತಂಡವು ಸ್ವರ್ಣ ಎಫ್ ಸಿ ಮಂಡ್ಯ ತಂಡದ ವಿರುದ್ಧ ಜಯಸಾಧಿಸಿತು.

ಆರಂಭದಿಂದಲೂ ಬಿರುಸಿನ ಆಟಕ್ಕಿಳಿದ 2 ತಂಡದ ಆಟಗಾರರು ಚಾಕಚಾಕ್ಯತೆಯಿಂದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ಮಧ್ಯೆ ಆಕ್ರಮಣಕಾರಿ ಆಟವಾಡಿದ ಬೆಂಗಳೂರು ತಂಡ ಪಂದ್ಯದ ಪ್ರಥಮಾರ್ಧದ 6ನೇ ನಿಮಿಷದಲ್ಲಿ ಸುನಿಲ್ ಹೊಡೆದ ಗೋಲಿನಿಂದ ಮುನ್ನಡೆ ಪಡೆದುಕೊಂಡಿತು. ದ್ವಿತೀಯಾರ್ಧದಲ್ಲಿ 2 ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರಿದರೂ ಗೋಲು ಗಳಿಸುವಲ್ಲಿ ವಿಫಲವಾದವು. ಇದರಿಂದ ಬೆಂಗಳೂರು ತಂಡವು ಮಂಡ್ಯ ತಂಡದ ವಿರುದ್ಧ 1-0 ಗೋಲಿನಿಂದ ಜಯಗಳಿಸಿ ಸೆಮಿಫೈನಲ್ ಹಂತ ಪ್ರವೇಶಿಸಿತು.

2 ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಿಡಿಎಲ್ ಎಫ್ ಸಿ ಬೈಲುಕೊಪ್ಪ ತಂಡವು ಹೆಚ್ ಡಬ್ಲೂಎ ಎಫ್ ಸಿ ತಲಪಾಡಿ, ಮಂಗಳೂರು ತಂಡವನ್ನು ಸೋಲಿಸಿತು. ಪ್ರಾರಂಭದಿಂದಲೂ ಬೈಲುಕೊಪ್ಪ ತಂಡವು ಹೊಂದಾಣಿಕೆಯ ಆಟವಾಡಿ ಚೆಂಡಿನ ಮೇಲೆ ಹತೋಟಿಯನ್ನು ಸಾಧಿಸಿತು. ಪಂದ್ಯದ ಮೊದಲಾರ್ಧದ 9ನೇ ನಿಮಿಷದಲ್ಲಿ ನೈಮಾ ಮತ್ತು 16ನೇ ನಿಮಿಷದಲ್ಲಿ ವಾಸರ್ ಹೊಡೆದ ಗೋಲು ಮುನ್ನಡೆಯನ್ನು ತಂದುಕೊಟ್ಟಿತು. ದ್ವಿತಿಯಾರ್ಧದಲ್ಲಿ ಬೈಲುಕೊಪ್ಪ ತಂಡವು ತಲಪಾಡಿ ತಂಡಕ್ಕೆ ಗೋಲು ಗಳಿಸುವದಕ್ಕೆ ಅವಕಾಶವನ್ನು ಮಾಡಿಕೊಡದ ಕಾರಣ 2-0 ಗೋಲುಗಳಿಂದ ಜಯಗಳಿಸಿ ಸೆಮಿಫೈನಲ್‍ಗೆ ಪ್ರವೇಶ ಪಡೆಯಿತು.