*ಗೋಣಿಕೊಪ್ಪಲು, ಆ. 21: ಅಕ್ರಮ ಮದÀ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹುದಿಕೇರಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು.

ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಗ್ರಾಮದಲ್ಲ್ಲಿ ಅಕ್ರಮ ಸಾರಾಯಿ ಮಾರಾಟ ದಂಧೆ ಮಿತಿಮೀರಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಒಳಪಡಿಸಲು ಮುಂದಾಗಬೇಕು ಎಂದು ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ಕಳೆದ 60 ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ಒಂದು ನಿರ್ದಿಷ್ಟ ಜಾಗ ಗುರುತಿಸಲು ಸಾಧ್ಯವಾಗಲಿಲ್ಲ. ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಇದರ ಬಗ್ಗೆ ಗಮನ ಹರಿಸಬೇಕು ಎಂದು ನೆಲ್ಲಿರ ಸೋಮಯ್ಯ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರ ನೀಡಿದ ಅಭಿವೃದ್ಧಿ ಅಧಿಕಾರಿ ಪಂಚಾಯಿತಿಯಿಂದ ಈಗಾಗಲೇ ಹೈಸೊಡ್ಲೂರುವಿನಲ್ಲಿ ಸ್ಥಳ ಖರೀದಿ ಮಾಡಲಾಗಿದೆ. ಆದರೆ ಅಲ್ಲಿ ಕಸವಿಲೇವಾರಿ ಮಾಡಲು ತಕರಾರು ಬಂದಿದ್ದು ತೊಂದರೆಯಾಗಿದೆ. ಸುಮಾರು ರೂ. 4 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಿರುವ ಸ್ಥಳ ಉಪಯೋಗಿಸುತ್ತಿಲ್ಲ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳಿಲ್ಲ, ಜೌಷಧಿಗಳು ದೊರೆಯುತ್ತಿಲ್ಲ. ಕಳೆದ 4-5 ವರ್ಷಗಳ ಹಿಂದೆ ಇಲ್ಲಿ ವೈದ್ಯಾಧಿಕಾರಿಗಳಾಗಿದ್ದ ಡಾ. ಜಗದೀಶ್ ಈಗ ನಾಪೋಕ್ಲುವಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಸಂಬಳ ಮಾತ್ರ ಹುದಿಕೇರಿ ಆಸ್ಪತ್ರೆಯಿಂದ ಸಂದಾಯ ವಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸ ಲಾಯಿತು. ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಮಾತನಾಡಿ, ಜಿಲ್ಲೆಯಾದ್ಯಂತ ವೈದ್ಯರ ಕೊರತೆ ಇದ್ದು, ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಮಾತನಾಡಿ ವಾರಕ್ಕೆ 2 ದಿನ ವೈದ್ಯರನ್ನು ನೇಮಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವದು ಎಂದು ತಿಳಿಸಿದರು.

ಜಿ.ಪಂ. ಸದಸ್ಯ ಪ್ರಕಾಶ್, ನೋಡಲ್ ಅಧಿಕಾರಿ ನಮೃತ ಪೂಣ್ಣಚ್ಚ, ಸದಸ್ಯರಾದ ಚಂಗುಲಂಡ ಸೂರಜ್, ಮೀದೆರಿರ ನವೀನ್, ಮಲ್ಲಂಗಡ ದಿವಿನ್, ನೂರೇರ ಮನೋಜ್ ಅಜ್ಜಿಕುಟ್ಟಿರ ಮಧು ಮಾದಪ್ಪ ಹಾಗೂ ಇನ್ನಿತರರು ಹಾಜರಿದ್ದರು.