ಶ್ರೀಮಂಗಲ, ಜೂ. 14: ಕೊಡವರು ತಮ್ಮ ತಾಯಿನಾಡು ಕೊಡಗು ಜಿಲ್ಲೆಯಲ್ಲಿಯೇ ಅಲ್ಪಸಂಖ್ಯಾತರಾಗಿದ್ದು, ಕೊಡವರ ಸಂರಕ್ಷಣೆಗೆ ಸಂವಿಧಾನಾತ್ಮಕ ಹಕ್ಕು-ಭದ್ರತೆ ಅನಿವಾರ್ಯವಾಗಿದೆ. ಭಾಷಾ ಅಲ್ಪಸಂಖ್ಯಾತರೆಂದು ಸರ್ವೋಚ್ಛ ನ್ಯಾಯಾಲಯ ಪರಿಗಣಿಸಿರುವ ಕೊಡವ ಜನಾಂಗವನ್ನು ಗುರುತಿಸಿ ಕಾನೂನು ಅನ್ವಯ ಕೇಂದ್ರ ಸರಕಾರ ಸೂಕ್ತ ಸ್ಥಾನಮಾನ ಹಾಗೂ ವಿಶೇಷ ಸವಲತ್ತು ನೀಡಬೇಕು. ಅವನತಿಯ ಅಂಚಿನಲ್ಲಿರುವ ಕೊಡವ ಜನಾಂಗಕ್ಕೆ ವಿಧಾನಸಭೆ ಹಾಗೂ ಲೋಕಸಭೆಗೆ ಪ್ರತಿನಿಧಿಗಳನ್ನು ನಾಮಕರಣ ಮಾಡುವ ಸೌಲಭ್ಯವನ್ನು ನೀಡಬೇಕೆಂದು ಪೊನ್ನಂಪೇಟೆಯ ಏಳು ಕೊಡವ ಸಂಘಗಳ ಒಕ್ಕೂಟದ ಪ್ರಮುಖರು ಸರಕಾರವನ್ನು ಒತ್ತಾಯಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಏಳು ಕೊಡವ ಸಂಘಗಳ ಒಕ್ಕೂಟದ ಪ್ರಮುಖರಾದ ಜೋಡುಬೀಟಿ ಕೊಡವ ಕೂಟದ ಅಧ್ಯಕ್ಷ ಮದ್ರೀರ ಗಿಣಿ ಸೋಮಯ್ಯ, ಬ್ರಹ್ಮಗಿರಿ ಕೊಡವ ಕೂಟದ ಅಧ್ಯಕ್ಷ ಚಿರಿಯಪಂಡ ಉಮೇಶ್‍ಉತ್ತಪ್ಪ, ಗಣಪತಿನಗರ ಕೊಡವ ಸಂಘದ ಅಧ್ಯಕ್ಷ ಕಟ್ಟೆರ ಲಾಲಪ್ಪ, ಇಗ್ಗುತಪ್ಪ ಕೊಡವ ಕೂಟದ ಪ್ರಮುಖ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಇಗ್ಗುತಪ್ಪ ಸೌಹಾರ್ದ ಸಹಕಾರಿ ಸಂಘದ ಪ್ರಮುಖ ಕೊಕ್ಕಲೆಮಾಡ ಬಿ. ಮೋಟಯ್ಯ ಅವರು ಒಕ್ಕೂಟದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಪತ್ರಿಕಾಗೋಷ್ಠಿ ಯಲ್ಲಿ ವಿವರಿಸಿದರು.

ಇದೀಗ ಅಲ್ಪಸಂಖ್ಯಾತರಾಗಿರುವ ಕೊಡವರ ಮತಗಳು ಚುನಾವಣೆ ಸಂದರ್ಭ ನಿರ್ಣಯವಲ್ಲ ಎನ್ನುವ ಮನೋಭಾವನೆ ಜನಪ್ರತಿನಿಧಿಗಳಲ್ಲಿ ಮೂಡಿದೆ. ಆದ್ದರಿಂದ ಕೊಡವರ ಮೇಲೆ ದೌರ್ಜನ್ಯವಾದರೂ ಅದನ್ನು ಖಂಡಿಸುವ ಕನಿಷ್ಟ ಸೌಜನ್ಯ ನಮ್ಮ ಜನಪ್ರತಿನಿಧಿಗಳಿಗಿಲ್ಲ. ಅಲ್ಪಸಂಖ್ಯಾತ ಕೊಡವರಿಗೆ ಚುನಾವಣೆಯಲ್ಲಿ ಕೊಡವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗದ ಕಾರಣ ಲೋಕಸಭೆ- ವಿಧಾನಸಭೆಗೆ ಕೊಡವರನ್ನು ನಾಮಕರಣ ಮೂಲಕ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ದೇವಟ್ ಪರಂಬುವಿನಲ್ಲಿ ಸ್ಥಾಪಿಸಿದ ಸ್ಮಾರಕವನ್ನು ಭಗ್ನಗೊಳಿಸಿ, ಕೊಡವರ ಭಾವನೆಗೆ ನೋವುಂಟು ಮಾಡಿ ಸೌಹಾರ್ದತೆಗೆ ಧಕ್ಕೆ ತಂದಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಇದೇ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಸಿಎನ್‍ಸಿ ಸಂಚಾಲಕ ಎನ್.ಯು. ನಾಚಪ್ಪ ನೇತೃತ್ವದ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಸ್ಮಾರಕ ನಿರ್ಮಾಣ ಸರಕಾರಿ ಜಾಗದಲ್ಲಿ ಮಾಡಿದ್ದು, ಸರಕಾರ ಮತ್ತು ಕೊಡವರಿಗೆ ಸಂಬಂಧಪಟ್ಟ ವಿಚಾರವಾಗಿದ್ದು, ಇದರಲ್ಲಿ ಮೂರನೇ ವರ್ಗ ಏಕೆ ಸ್ಮಾರಕವನ್ನು ಕೆಡವಿ ಅದನ್ನು ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಹುಟ್ಟಿಕೊಂಡಿರುವ ಕೊಡಗು ಸೌಹಾರ್ದ ವೇದಿಕೆ ಜಿಲ್ಲೆಯ ಸೌಹಾರ್ದತೆ ಕದಡುವ ವೇದಿಕೆಯಾ ಗಿದೆ. ಇದರ ಅವಶ್ಯಕತೆ ಇಲ್ಲ. ಕೊಡವ ಸಂಘ-ಸಂಸ್ಥೆಗಳನ್ನು ಹೊರತುಪಡಿಸಿ ಕಟ್ಟಿಕೊಂಡಿರುವ ಈ ವೇದಿಕೆ ಹೇಗೆ ಸೌಹಾರ್ದ ವೇದಿಕೆ ಯಾಗಲಿದೆ ಎಂದು ಪ್ರಶ್ನಿಸಿದರು. ಈ ವೇದಿಕೆಯಿಂದ ಅಮ್ಮಕೊಡವ ಸಮಾಜ ಹೊರಬಂದಿರುವದನ್ನು ಸ್ವಾಗತಿಸಿದ ಅವರು ಕೊಡವರ ವಿರುದ್ಧ ಕೆಲವು ಪೂರ್ವಾಗ್ರಹ ಪೀಡಿತರ ವೇದಿಕೆ ಇದಾಗಿದೆ ಎಂದು ಕಿಡಿಕಾರಿದರು.

ಇದುವರೆಗೆ ಕೊಡವ ಜನಾಂಗದ ಅರ್ಹರಿಗೆ ಹಾಗೂ ವಿಕಲಚೇತನರಿಗೆ ಬಿ.ಪಿ.ಎಲ್. ಕಾರ್ಡ್ ಸೌಲಭ್ಯ ನೀಡದೆ ಇರುವದು, ಕೊಡವರ ಧಾರ್ಮಿಕ ಕೇಂದ್ರಗಳಾದ ಕೊಡವರ ಐನ್‍ಮನೆ, ಮುಂದ್‍ಮನೆ, ಕೈಮಡ ಶಿಥಿಲ ವ್ಯವಸ್ಥೆಯಲ್ಲಿದ್ದು ಅದರ ಅಭಿವೃದ್ಧಿಗೆ, ಕೋವಿಹಕ್ಕು ಅಭಾದಿತ ಮುಂದು ವರಿಕೆಗೆ ಮೂಲಭೂತ ಸೌಲಭ್ಯಕ್ಕಾಗಿ ಕಳೆದ ಆರು ದಶಕಗಳಲ್ಲಿ ಯಾವದೇ ರಾಜಕೀಯ ಪಕ್ಷಗಳೂ, ಜನಪ್ರತಿನಿಧಿ ಗಳು ಸೂಕ್ತ ಕಾರ್ಯಕ್ರಮ ರೂಪಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕೊಡವ ಜನಾಂಗದ ಸಂರಕ್ಷಣೆಗೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‍ಗಳನ್ನು ಚುನಾವಣೆ ಪ್ರಣಾಳಿಕೆಗಳಲ್ಲಿ ಘೋಷಣೆ ಮಾಡದೇ ನಿರ್ಲಕ್ಷಿಸಲಾಗಿದೆ. ಕೊಡವರು ಪ್ರತ್ಯೇಕ ರಾಜಕೀಯ ವೇದಿಕೆ ಮೂಲಕ ಈಗ ಇರುವ ರಾಜಕೀಯ ಪಕ್ಷಕ್ಕೆ ಪರ್ಯಾಯವಾಗಿ ಚುನಾವಣೆಯಲ್ಲಿ ಕಣಕಿಳಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದರು.

ಪುರಾತನ ಕಾಲದಿಂದಲೂ “ಗುರುಕಾರೋಣರಿಗೆ ಮೀದಿ” ಇಡುವ ಪದ್ಧತಿ ಸಂದರ್ಭ ಪ್ರಾಣಿ ಹರಕೆ ತಡೆಯಾಗದಂತೆ ಸರಕಾರಿ ಆದೇಶ ನೀಡಲು ರಾಜ್ಯ, ಕೇಂದ್ರ ಸರಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕೊಡಗಿನಲ್ಲಿ ಕೊಡವರೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿರುವ ಜನಾಂಗಗಳನ್ನು ತಮ್ಮ ಸ್ವಾರ್ಥಕ್ಕಾಗಿ ಕೆಲವರು ಎತ್ತಿಕಟ್ಟುತ್ತಿದ್ದು, ಇಂತಹ ಮುಖಂಡರ ಬಗ್ಗೆ ಎಚ್ಚರವಹಿಸಬೇಕು. ಇಂತಹ ಮುಖಂಡರನ್ನು ಸಭೆ-ಸಮಾರಂಭಗಳಿಗೆ ಆಹ್ವಾನಿಸದಂತೆ ಹಾಗೂ ಇವರು ಹಾಜರಿರುವ ಕೊಡವ ಸಭೆ-ಸಮಾರಂಭಗಳಿಂದ ಕೊಡವರು ಮೌನವಾಗಿ ಹೊರನಡೆಯುವಂತೆ ಕರೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಒಕ್ಕೂಟದ ಸಭೆಯಲ್ಲಿ ಒಕ್ಕೂಟದ ಪ್ರಮುಖರಾದ ಮಚ್ಚಮಾಡ ನಂಜಪ್ಪ, ಕಡೆಮಾಡ ಭೀಮಯ್ಯ, ಹಾಜರಿದ್ದರೆಂದು ತಿಳಿಸಿದರು.